ಕೊಪ್ಪಳ: ಅಬಕಾರಿ ಇಲಾಖೆ ನಿಯಮ ಪಾಲನೆಯನ್ನು ನೋಡಿಕೊಳ್ಳುವುದು ಬಿಟ್ಟು ಆದಾಯದ ಕಡೆಗೆ ಹೆಚ್ಚು ಗಮನ ಹರಿಸುತ್ತಿರುವುದರಿಂದ ಹಳ್ಳಿ ಹಳ್ಳಿಗಳಲ್ಲಿ ಅಕ್ರಮ ಮದ್ಯ ಮಾರಾಟಗಳು ಹೆಚ್ಚಾಗುತ್ತಿದೆ. ಅವಕಾಶ ಇಲ್ಲದ ಕಡೆಗಳಲ್ಲೂ ಮುಕ್ತ ಮಾರಾಟ ಆಗುತ್ತಿವೆ.
ಹೈಲೈಟ್ಸ್:
⭕ ಅಬಕಾರಿ ನಿಯಮಗಳು ಗಾಳಿಗೆ-ನಸುಕಿನಿಂದಲೇ ಮಾರಾಟ ಶುರು.
⭕ ಅಬಕಾರಿ ಇಲಾಖೆಯ ನಿಯಮಾನುಸಾರ ಸಿಎಲ್-2 ಅಂಗಡಿಗಳನ್ನು ಬೆಳಗ್ಗೆ 10 ರಿಂದ ರಾತ್ರಿ 10.30ರವರೆಗೆ ಮಾತ್ರ ತೆರೆಯಬೇಕು.
⭕ ಬಾರ್ಗಳ ಮಾಲೀಕರೇ ಬೈಕ್ ಹಾಗೂ ವಾಹನಗಳ ಮೂಲಕ ಮದ್ಯವನ್ನು ಹಳ್ಳಿಗಳಿಗೆ ಸರಬರಾಜು ಮಾಡುತ್ತಿರುವುದು ಇಲಾಖೆ ಅಧಿಕಾರಿಗಳ ಗಮನಕಿದ್ದರೂ ಗಪ್ ಚುಪ್...!?.
ಕೊಪ್ಪಳ: ನಗರ ಸೇರಿ ಜಿಲ್ಲೆಯಾದ್ಯಂತ ಬೆಳಗ್ಗೆ ಸೂರ್ಯೋದಯಕ್ಕಿಂತ ಮೊದಲೇ ಮದ್ಯದ ಅಂಗಡಿ ತೆರೆದು ಮದ್ಯ ಮಾರಾಟ ಮಾಡುತ್ತಿದ್ದರೂ, ಅಬಕಾರಿ ಇಲಾಖೆ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಜಿಲ್ಲೆಯ ನಗರ, ಪಟ್ಟಣ ಹಾಗೂ ಹಳ್ಳಿಗಳಲ್ಲಿ ಬಹುತೇಕ ಮದ್ಯದ ಅಂಗಡಿಗಳಲ್ಲಿ ನಸುಕಿನಿಂದಲೇ ಮದ್ಯ ಮಾರಾಟ ಮಾಡಲಾಗುತ್ತಿದೆ. ಅಬಕಾರಿ ಇಲಾಖೆಯ ನಿಯಮಾನುಸಾರ ಸಿಎಲ್-2 ಅಂಗಡಿಗಳನ್ನು ಬೆಳಗ್ಗೆ 10 ರಿಂದ ರಾತ್ರಿ 10.30ರವರೆಗೆ ಮಾತ್ರ ತೆರೆಯಬೇಕು. ಆದರೆ, ಅಬಕಾರಿ ಇಲಾಖೆ ನಿಯಮಗಳನ್ನು ಲೆಕ್ಕಿಸದ ಅಂಗಡಿ ಮಾಲೀಕರು, ನಸುಕಿನಿಂದ ಮದ್ಯರಾತ್ರಿವರೆಗೂ ಮದ್ಯ ಮಾರಾಟ ಮಾಡುತ್ತಿರುವುದು ಸಾಮಾನ್ಯವಾಗಿದೆ.
ನಿರ್ಲಕ್ಷ್ಯ:
ಮದ್ಯದ ಅಂಗಡಿಗಳ ಮೇಲೆ ನಿಗಾವಹಿಸಬೇಕಿರುವ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯದಿಂದಲೇ ನಿಯಮಗಳು ಲೆಕ್ಕಕ್ಕೆ ಇಲ್ಲದಂತಾಗಿವೆ ಎಂಬ ಆರೋಪವೂ ಕೇಳಿಬಂದಿದೆ. ಪರವಾನಗಿ ಪಡೆದ ಮದ್ಯದಂಗಡಿ ಮಾಲೀಕರ ಬದಲಾಗಿ, ಬೇರೆಯವರು ಅಂಗಡಿ ನಡೆಸುತ್ತಿದ್ದಾರೆ. ನಗರದಾದ್ಯಂತ ಮದ್ಯ ಮಾರಾಟಕ್ಕೆ ಅವಕಾಶ ಇಲ್ಲದ ಕಡೆಗಳಲ್ಲೂ ಮದ್ಯವನ್ನು ಮುಕ್ತವಾಗಿ ಮಾರಾಟ ಮಾಡಲಾಗುತ್ತಿದೆ. ದೂರುಗಳು ಬಂದಾಗ ಜಾಗೃತವಾಗುವ ಅಧಿಕಾರಿ ವರ್ಗ, ಬಳಿಕ ಆ ಕಡೆ ತಿರುಗಿಯೂ ನೋಡುತ್ತಿಲ್ಲ. ಹೀಗಾಗಿ ನಿಯಮಬಾಹಿರವಾಗಿ ಮದ್ಯ ಮಾರಾಟ ಹೆಚ್ಚಿದೆ.
ಹಳ್ಳಿಗಳಲ್ಲಿ ಹೆಚ್ಚು:
ನಗರ ಅಷ್ಟೇ ಅಲ್ಲದೆ, ಗ್ರಾಮೀಣ ಭಾಗದಲ್ಲಿ ಅಕ್ರಮ ಮದ್ಯ ಮಾರಾಟ ಹೆಚ್ಚಿದೆ. ಇತ್ತೀಚೆಗೆ ಬಸಾಪಟ್ಟಣ ಗ್ರಾಮದಲ್ಲಿ ಕೆಆರ್ಎಸ್ ಪಕ್ಷದಿಂದ ಹೋರಾಟ ನಡೆದ ಬಳಿಕ ಅಬಕಾರಿ ಇಲಾಖೆ ಅಧಿಕಾರಿಗಳು ಗ್ರಾಮಕ್ಕೆ ತೆರಳಿ ಮದ್ಯ ಮಾರಾಟ ತಡೆದಿದ್ದರು. ಪ್ರತಿ ಗ್ರಾಮದಲ್ಲೂ ಅಕ್ರಮ ಮದ್ಯದ ಅಂಗಡಿಗಳಿದ್ದರೂ, ಇದಕ್ಕೆ ಕಡಿವಾಣ ಹಾಕಲು ಸಾಧ್ಯವಾಗಿಲ್ಲ. ಬಾರ್ಗಳ ಮಾಲೀಕರೇ ಬೈಕ್ ಹಾಗೂ ವಾಹನಗಳ ಮೂಲಕ ಮದ್ಯವನ್ನು ಹಳ್ಳಿಗಳಿಗೆ ಸರಬರಾಜು ಮಾಡುತ್ತಿರುವುದು ಇಲಾಖೆ ಅಧಿಕಾರಿಗಳ ಗಮನಕ್ಕೂ ಇದೆ. ಆದರೆ, ಅಕ್ರಮ ಮದ್ಯ ಮಾರಾಟ ತಡೆಗೆ ಮುತುವರ್ಜಿವಹಿಸದೆ ಇರುವುದು ಅನುಮಾನ ಮೂಡಿಸಿದೆ.
ಅಬಕಾರಿ ಅಧಿಕಾರಿಗಳ ಮೌನ, ಪೊಲೀಸರಿಂದಲೇ ದಾಳಿ:
ಅಕ್ರಮ ಮದ್ಯ, ಗಾಂಜಾ ಮಾರಾಟದಂತಹ ಅಕ್ರಮ ತಡೆಗೆ ಸರಕಾರ ಅಬಕಾರಿ ಇಲಾಖೆಯನ್ನೇ ರಚಿಸಿದೆ. ಆದರೆ, ಜಿಲ್ಲೆಯಲ್ಲಿ ಅಬಕಾರಿ ಇಲಾಖೆಗಿಂತ ಪೊಲೀಸ್ ಇಲಾಖೆಯ ಅಧಿಕಾರಿಗಳೇ ಅಕ್ರಮ ಮದ್ಯ ಹಾಗೂ ಗಾಂಜಾ ಬೆಳೆಯುವವರ, ಮಾರಾಟ ಮಾಡುವವರ ವಿರುದ್ಧ ಪ್ರಕರಣ ದಾಖಲಿಸಿರುವುದು ದಾಖಲೆಯಿಂದ ತಿಳಿಯುತ್ತಿದೆ. ಆದರೆ ಅಬಕಾರಿ ಇಲಾಖೆ ಅಧಿಕಾರಿಗಳು ಮೌನವಹಿಸಿರುವುದು ನಾಚಿಕೆಗೇಡಿ ಸಂಗತಿಯಾಗಿದೆ.
ಮದ್ಯದ ಅಂಗಡಿಯವರು ನಿಯಮಾನುಸಾರ ಮದ್ಯದ ಅಂಗಡಿ ತೆರೆಯುವುದು, ಮುಚ್ಚುವುದನ್ನು ಮಾಡಬೇಕು. ನಸುಕಿನ ಜಾವ ಮದ್ಯದ ಅಂಗಡಿ ತೆರೆದಿರುವ ಕುರಿತಂತೆ ಗಮನಹರಿಸಿ, ಅಕ್ರಮ ಮದ್ಯ ಮಾರಾಟವನ್ನು ತಡೆಯಬೇಕಾಗಿರುವುದು ಅಬಕಾರಿ ಇಲಾಖೆ ಅಧಿಕಾರಿಗ, ಆದ್ಯ ಕರ್ತವ್ಯವಾಗಿದೆ. ಜಿಲ್ಲೆಯಲ್ಲಿ ಚಹಾ ಅಂಗಡಿಗಳಿಗಿಂತ ಮುಂಚೆಯೇ ಮದ್ಯದ ಅಂಗಡಿ ತೆರೆಯಲಾಗುತ್ತಿದೆ. ಅಬಕಾರಿ ನಿಯಮ ಉಲ್ಲಂಘಿಸಿ ಎಲ್ಲೆಂದರಲ್ಲಿ ಅಕ್ರಮ ಮದ್ಯ ಮಾರಾಟ ಮಾಡಲು ಅವಕಾಶ ನೀಡಲಾಗಿದೆ. ಈ ಬಗ್ಗೆ ಅಬಕಾರಿ ಇಲಾಖೆ ಮೇಲಧಿಕಾರಿಗಳು ಗಮನಹರಿಸಬೇಕು. ಹಳ್ಳಿಗಳಲ್ಲಿ ಸುಲಭವಾಗಿ ಸಿಗುವ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಬೇಕು. ನಗರದಲ್ಲಿ ನಿಯಮಾನುಸಾರ ಮದ್ಯದ ಅಂಗಡಿ ತೆರೆದು, ಮುಚ್ಚಬೇಕು ಎನ್ನುವುದು ಸಾರ್ವಜಮಿಕ ಹಾಗೀ ಪ್ರಗತಿಪರ ಸಂಘಟನೆಗಳ ಆಗ್ರಹವಾಗಿದೆ. ಈಗಲಾದರು ಅಬಕಾರಿ ಇಲಾಖೆಯ ಅಧಿಕಾರಿಗಳು ಎಚ್ವೆತ್ತು, ತಮ್ಮ ಕರ್ತವ್ಯ ಸರಿಯಾಗಿ ನಿಭಾಯಿಸುವುದರ ಜತೆಗೆ ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ ಮದ್ಯ ಮಾರಾಟವನ್ನು ತಡೆಯುತಗತಾರೆಯೇ ಕಾದು ನೋಡೋಣ.
💥🖋ಮಲ್ಲಿಕಾರ್ಜುನ.V.H



Post a Comment